Sunday, June 14, 2026

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

 

ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ?

ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯಿಂದ ಜನ್ಮ ತಾಳಿದ ಬಸವಣ್ಣನವರು ಬಸವ ಕಲ್ಯಾಣಕ್ಕೆ ಬಂದು ಪರುಷ ಕಟ್ಟೆಯ ಮೇಲೆ ನ್ಯಾಯ ಪಂಚಾಯತಿ ಮಾಡುತ್ತಾ ವಿಶ್ವಕ್ಕೆ ಅನ್ವಯವಾಗುವ ನಂದಿ ತತ್ವ ಅಥವಾ ಎತ್ತಿನ ಕೃಷಿಕರ ತತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ ಕಾರಣಕ್ಕಾಗಿ ಅವರು ವಿಶ್ವಗುರು ಆದರು ಎಂಬುದು ಅವರೇ ಬರೆದ ವಚನವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ತಿಳಿಯುತ್ತದೆ.

ಕೃಷಿ ಕೃತ್ಯ ಕಾಯಕ ಮಾಡುವ 
ಸದ್ಭಕ್ತನ ಪಾದವ ತೋರಿಸಿ ಬದುಕಿಸಯ್ಯಾ,
ಆತನ ತನು ಶುದ್ಧ, ಆತನ ಮನ ಶುದ್ಧ, 
ಆತನ ಮನೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರು ಪಾವನ ನೋಡಾ ಕೂಡಲ ಸಂಗಮದೇವ.

"ನಂದಿ ಅಥವಾ ಜೋಡೆತ್ತಿನ ಕೃಷಿಕರ ಪಾದಗಳಿಲ್ಲದಿದ್ದರೆ ನಾನು ಬದುಕಿರಲು ಸಾಧ್ಯವಿಲ್ಲ" ಎಂದು ಬಸವಣ್ಣನವರು ಹೇಳಿದ ಮಾತು 'ಗುರು' ಎಂಬ ಶಬ್ದ ಎತ್ತಿನ ಕೃಷಿಕರ ಶ್ರಮದಿಂದ ನಿರ್ಮಾಣವಾದ ನಾಗರೀಕ ಸಮಾಜದಿಂದ ಜನ್ಮ ತಾಳಿದೆ ಎಂಬುದು ತಿಳಿಯುತ್ತದೆ. ನಂದಿ ಶಕ್ತಿ ಹಾಗೂ ನಂದಿ ಕೃಷಿಕರ ಶ್ರಮದಿಂದ ಅಭಿವೃದ್ಧಿ ಹೊಂದಿದ ನಾಗರೀಕ ಸಮಾಜದ ಗುರುಗಳಿಂದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಜನ್ಮ ತಾಳಿದವು ಎಂಬುದು ಬಸವಣ್ಣನವರ ವಚನದಿಂದಲೇ ತಿಳಿಯುತ್ತದೆ. ಅದೇ ಕಾರಣಕ್ಕೆ ಶಿವಾಲಯದ ಶಿವಲಿಂಗದ ಮುಂದೆ ಹಾಗೂ ಲಿಂಗಾಯತರ ಜಗುಲಿಯ ಮೇಲೆ‌ ನಂದಿ ಮೂರ್ತಿ ಇಟ್ಟು ಪೂಜಿಸುವುದನ್ನು ಕಾಣುತ್ತೇವೆ. ಜೋಡೆತ್ತಿನ ಕೃಷಿಕರ ಶ್ರಮದಿಂದ ಜನ್ಮ ತಾಳಿದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಕೌಟುಂಬಿಕ ಹಾಗೂ ಪಾರಮಾರ್ಥಿಕವಾಗಿ ನಾಗರೀಕತೆ ಬೆಳೆಯಲು ದಾರಿ ತೋರುವ ಭೂಮಿಯ ಮೇಲಿನ  ಶ್ರೇಷ್ಠ ವೈಜ್ಞಾನಿಕ ಪೂಜಾ ಸಂಪ್ರದಾಯಗಳಾಗಿವೆ. ಕಳೆದ 50 ವರ್ಷಗಳಲ್ಲಿ ನಂದಿ ಕೃಷಿಕರ ಶ್ರಮವನ್ನು ನಿರ್ಲಕ್ಷಿಸಿ ಜಗತ್ತಿನಾದ್ಯಂತ ಜಾರಿಗೆ ತರುತ್ತಿರುವ ತೈಲ‌ ಶಕ್ತಿ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳಿಗೆ ಪೂರಕ ಕಾನೂನುಗಳಿಂದ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನ ಹಲವು ರೋಗಗಳಿಗೆ ತುತ್ತಾಗಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಬಳಲುತ್ತಿದ್ದಾರೆ.  ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ನಂದಿ ಸಂಪತ್ತು ಕಾಸಾಯಿಖಾನೆ ಪಾಲಾಗದೆ ರೈತರ ಮನೆಗಳಲ್ಲಿ ಉಳಿಯುವಂತೆ ಮಾಡಿದರೆ ಮಾತ್ರ ಇಂದಿನ ನಾರೀಕತೆಯ ಜನರು ಸ್ವಾಸ್ಥ್ಯದಿಂದ ಜೀವನ ನಡೆಸಲು ಸಾಧ್ಯವೆಂಬುದು ವೈಜ್ಞಾನಿಕವಾಗಿ ತಿಳಿಯುತ್ತಿದೆ. ಈ ಸತ್ಯದ ಅರಿವನ್ನು ಮೂಡಿಸುವ ವಚನವನ್ನು ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಬರೆದಿರುವುದು ಅವರ ವೈಜ್ಞಾನಿಕ ಹಾಗೂ ದೂರದೃಷ್ಟಿಕೋನದ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.

ನಂದಿ ಕೃಷಿಕರ ಶ್ರಮದಿಂದ ಅಭಿವೃದ್ದಿ ಹೊಂದಿದ ಸಮಾಜದಲ್ಲಿ ವಿಶ್ವತೋಮುಖ ಚಿಂತನೆಗಳಿಗೆ ಅವಕಾಶ ದೊರೆತು ವಿಶ್ವ ಪ್ರಜ್ಞೆಯ ಸಂಕೇತವಾದ ಲಿಂಗದ ಪರಿಕಲ್ಪನೆ ಮುನ್ನೆಲೆಗೆ ಬರಲು ಪ್ರಾರಂಭಿಸುವುದು. ಕಳೆದ 5 ಸಾವಿರ ವರ್ಷಗಳಿಂದ ನಂದಿ ಕೃಷಿಕರ ಶ್ರಮದಿಂದ ನಾಗರೀಕತೆ ಬೆಳೆಯುತ್ತಾ ಬಂದಾಗ 6ನೇ ಶತಮಾನದಲ್ಲಿ ಶಿವಲಿಂಗದ ಪರಿಕಲ್ಪನೆ ಮುನ್ನೆಲೆಗೆ ಬಂದು ಶಿವಾಲಯಗಳು ನಿರ್ಮಾಣವಾಗಲು ಪ್ರಾರಂಭಿಸಿದವು. 12ನೇ ಶತಮಾನದ ಕಾಲಘಟ್ಟದಲ್ಲಿ ಉತ್ತರ ಭಾರತದಲ್ಲಿ ನಿರ್ಮಿತವಾದ ಶಿವಾಲಯಗಳು ಮುಸಲ್ಮಾನರ ದಾಳಿಯಿಂದ‌ ಧ್ವಂಸವಾಗಿ ಶಿವಲಿಂಗ ಪೂಜಾ ಸಂಸ್ಕೃತಿ ನಾಶವಾಗುತ್ತಿರುವುದನ್ನು ಗಮನಿಸಿದ ಬಸವಣ್ಣನವರು ಮುಂದೆ ದಕ್ಷಿಣ ಭಾರತದ ಶಿವಾಲಯಗಳು ಧ್ವಂಸವಾಗುವ ಕಾಲ ಹತ್ತಿರವಾಗುತ್ತಿದೆ ಎಂಬುದನ್ನು ದೂರ ದೃಷ್ಟಿಕೋನದಿಂದ ಅರಿತರು. ಶಿವಾಲಯಗಳು ಧ್ವಂಸವಾಗುವುದು ಎಂದರೆ ದೇಶದ ಕೃಷಿ ಸಂಸ್ಕೃತಿ ಹಾಗೂ ನಾಗರೀಕತೆ ನಾಶವಾಗುವುದು ಎಂದು ಅರ್ಥ. ಈ ಸತ್ಯವನ್ನು ಅರಿತ ಬಸವಣ್ಣನವರು ಇಷ್ಟಲಿಂಗ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದು ಇಷ್ಟಪಟ್ಟವರು ಇಷ್ಟಲಿಂಗ ಧರಿಸಿ ಲಿಂಗ ಪೂಜಾ ಸಂಪ್ರದಾಯವನ್ನು ತಮ್ಮ‌ ಮನೆಗಳಲ್ಲಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂಬುದು ಬಸವಣ್ಣನವರ ಉದ್ದೇಶವಾಗಿತ್ತು. ಜೊತೆಗೆ ನಮ್ಮ ನಂದಿ ಕೃಷಿ ಸಂಸ್ಕೃತಿಗೆ ಧಕ್ಕೆ ಆಗಬಹುದಾದ ಸಂದರ್ಭದಲ್ಲಿ ಲಿಂಗ ಹಾಗೂ ಜಗುಲಿಯ ಮೇಲಿರುವ ನಂದಿ ಆಧಾರಿತವಾಗಿ ಜನರು ಒಗ್ಗೂಡಿ ಪರಿಹಾರ ಕಂಡುಕೊಳ್ಳುತ್ತಾ ಸಾಗಿ, ನಾಗರೀಕತೆ ಬೆಳೆಯುತ್ತಾ ಸಾಗಬೇಕು ಎಂಬುದು ಬಸವಣ್ಣನವರ ದೂರದೃಷ್ಟಿಕೋನವಾಗಿತ್ತು.  ಕಳೆದ 9 ಶತಮಾನಗಳಲ್ಲಿ ಅನೇಕರು ನಮ್ಮ ಮಣ್ಣಿನ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿದಾಗ ಜನರು ಚದುರಿ ಹೋದರೂ ಸಹ ಇಷ್ಟಲಿಂಗ ಪೂಜಾ ಸಂಪ್ರದಾಯದಿಂದ ಮರಳಿ ಒಂದಾಗಿ ಮಣ್ಣಿನ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಇಷ್ಟಲಿಂಗ ಪೂಜಾ ಸಂಪ್ರದಾಯದಿಂದ‌ ಕಾಲ ಕಾಲಕ್ಕೆ ಅನೇಕ‌ ಶರಣರು ಹಾಗೂ ಸಂತರು ಉದಯಿಸಿ ನಮ್ಮ ದೇಸಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ಬಂದಿರುವುದರ ಸಾಕ್ಷಿಯಾಗಿ ಅನೇಕ ಬೃಹತ್ ನಂದಿ ದೇವಸ್ಥಾನಗಳು ನಿರ್ಮಾಣ ಆಗಿರುವುದನ್ನು ಅನೇಕ ಕಡೆ ಕಾಣುತ್ತೇವೆ. 

12ನೇ ಶತಮಾನದಲ್ಲಿ ಬಸವಣ್ಣನವರು‌ ನ್ಯಾಯ ಪಂಚಾಯಿತಿ ನಡೆಸುತ್ತಿದ್ದ ಪರುಷ ಕಟ್ಟೆ ಸುತ್ತಲೂ ಇರುವ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯದ ಅಂದಿನ ಮನೆಗಳು ನಾಶವಾಗಿ ಇಂದು ಮುಸಲ್ಮಾನರ‌ ಮನೆಗಳು ತಲೆ ಎತ್ತಿ ನಿಂತಿವೆ. ಬಸವಣ್ಣನವರ ಕಾಲದ ಪರುಷ ಕಟ್ಟೆಯ ವೈಭವ ಹಾಗೂ ಇಂದಿನ ಅದರ ದುಸ್ಥಿತಿಯನ್ನು ಅವಲೋಕನೆ ಮಾಡಿದರೆ ಬಸವವಣ್ಣನವರು ಯಾವ ಉದ್ದೇಶದಿಂದ ಇಷ್ಟಲಿಂಗ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದರು ಎಂಬುದು ನಮಗೆಲ್ಲ ಅರಿವು ಆಗುತ್ತದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿತ ವಿಶ್ವದ ಮೊದಲ ಸಂಸತ್ತು ಹಾಗೂ 21ನೇ ಶತಮಾನದಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ರಚನೆಯ ಹಿಂದೆ ನಂದಿ ಕೃಷಿಕರ ಶ್ರಮ ಅಡಗಿದೆ  ಎಂಬುದಕ್ಕೆ ಸಂವಿಧಾನದಲ್ಲಿರುವ ಸಿಂಧೂ ನದಿ ನಾಗರೀಕತೆಯ ನಂದಿ ಮುದ್ರೆಯು ಸಾಕ್ಷಿಯಾಗಿದೆ. ಅಂದರೆ, ನಂದಿ ಕೃಷಿ ಸಂಸ್ಖರತಿಯಿಂದ ನಾಗರೀಕತೆ ಬೆಳವಣಿಗೆಗೆ ಶ್ರೇಷ್ಠ ಕೊಡುಗೆ ನೀಡುತ್ತಾ ಬಂದಿರುವ ವೀರಶೈವರು ಹಾಗೂ ಲಿಂಗಾಯತರು ಸಂವಿಧಾನ ರಚನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ತಿಳಿಯುತ್ತದೆ. 

ಕಳೆದ ಎರಡು ಶತಮಾನದಲ್ಲಿ ಜಾರಿಯಾಗುತ್ತಾ ಬಂದಿರುವ ದೇಸಿ ಕೃಷಿ ಸಂಸ್ಕೃತಿಗೆ ವಿರುದ್ಧವಾದ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಹಾಗೂ ತೈಲ ಆಧಾರಿತ ಕೃಷಿಯಿಂದಾಗಿ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ನಂದಿ ಅಥವಾ ಜೋಡೆತ್ತಿನ ಕೃಷಿಕರು ಅಳಿವಿನ ಅಂಚಿಗೆ ಬಂದು ನಿಲ್ಲುವಂತಾಗಿದೆ. ಬೇರುಗಳಿಲ್ಲದ ಮರವು ಹೇಗೆ ಫಲ ಕೊಡಲು ಸಾಧ್ಯವಿಲ್ಲವೋ ಅದೇ ರೀತಿ  ನಂದಿ ಕೃಷಿಕರೆಂಬ ಬೇರುಗಳಿಲ್ಲದೆ ಬಸವ ತತ್ವ ಯಾವುದೇ ಫಲ ಕೊಡದೆ ಸೊರಗುತ್ತಿದೆ.  ನಂದಿ ಕೃಷಿಕರ ಶ್ರಮ ಹಾಗೂ ಅವರು ನಾಗರೀಕತೆ ಬೆಳವಣಿಗೆಗೆ ನೀಡುತ್ತಾ ಬಂದಿರುವ ಶ್ರೇಷ್ಠ ಕೊಡುಗೆಯನ್ನು ಪರಿಗಣಿಸದೆ ವಿಶ್ವದ ಎಲ್ಲ ದೇಶಗಳು ಜಾರಿಗೆ ತರುತ್ತಿರುವ ಕಾನೂನು ಹಾಗೂ ಯೋಜನೆಗಳು ಇಂದಿನ ಬಸವ ತತ್ವ ಪ್ರತಿಪಾದಕರು ದಾರಿ ಕಾಣದೆ ಒದ್ದಾಡುವಂತೆ ಮಾಡುತ್ತಿದೆ. ಇಂದು ಅನೇಕ ಪೂಜ್ಯರ ನಡುವೆ ವಾದ ವಿವಾದಗಳು ನಡೆಯುತ್ತಿರುವುದಕ್ಕೆ ಮೂಲ‌ ಕಾರಣ ಬಸವ ತತ್ವಕ್ಕೆ ವಿರುದ್ಧವಾದ ವ್ಯವಸ್ಥೆ ವಿಶ್ವಾದ್ಯಾಂತ ನಿರ್ಮಾಣ ಆಗಿರುವುದಾಗಿದೆ. ಈ ಸತ್ಯವನ್ನು ಅರಿಯದೆ ಹೆಜ್ಜೆ ಇಡುವ ಅನೇಕ ದೇಶಗಳು ನಾಶವಾಗುವ ದಿನಗಳು ಹತ್ತಿರವಾಗುತ್ತಿವೆ.

ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ತೈಲ ಸಂಕಷ್ಟಕ್ಕೆ ಮಠ ಮಂದಿರಗಳಲ್ಲಿರುವ ನಂದಿ ಮೂರ್ತಿಗಳ ಆಧಾರಿತವಾಗಿ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ. 

ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಪರುಷ ಕಟ್ಟೆ ಕೂಗಿ ಹೇಳುತ್ತಿರುವ ನಂದಿ ಕೃಷಿ ಸಂಸ್ಕೃತಿಯ ಇತಿಹಾಸವನ್ನು ಆಲಿಸಿ ಹೆಜ್ಜೆ ಇಡಬೇಕಾಗಿದೆ. ಎಲ್ಲ ಪೂಜ್ಯರು ಬಸವ ತತ್ವದ ಮೂಲ ಬೇರುಗಳಾದ ನಂದಿ ಕೃಷಿಕರಿಗೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಒಂದಾಗಿ ಹೆಜ್ಜೆ ಇಟ್ಟು ನಂದಿ ಸಂತತಿ ರೈತರ ಮನೆಗಳಲ್ಲಿ ಉಳಿಸಲು ಪ್ರಯತ್ನಿಸಿದರೆ ಮಾತ್ರ ಬಸವಣ್ಣನವರು ದೂರದೃಷ್ಟಿಕೋನದಿಂದ ಇಟ್ಟ ಹೆಜ್ಜೆ ಇಂದು ಸಾರ್ಥಕ ರೂಪ ತಾಳುತ್ತದೆ. ಇದು ವಿಶ್ವ ಮಟ್ಟದಲ್ಲಿ ಇಡುವ ಕ್ರಾಂತಿಕಾರಕ ಹೆಜ್ಜೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ಭಾರತದ ಸಂವಿಧಾನ ಹಾಗೂ ವಿಶ್ವದ ಬಹು ಜನರ ಭವಿಷ್ಯ ವೀರಶೈವ ಲಿಂಗಾಯತ ಪೂಜ್ಯರು ಇಡುವ ಮುಂದಿನ ಹೆಜ್ಜೆಯ ಮೇಲೆ ನಿಂತಿದೆ.

ನಂದಿ ಶಕ್ತಿಯು ಭೂಮಿಯ ಜೀವಂತಿಕೆಯನ್ನು ಹೆಚ್ಚಿಸುತ್ತಾ ಎಲ್ಲ ಧರ್ಮಗಳು ಉಳಿಯುವಂತೆ ಮಾಡುವುದು. ತೈಲ‌ ಶಕ್ತಿಯು ಭೂಮಿಯ ಜೀವಂತಿಕೆಯನ್ನು ನಾಶ ಮಾಡುತ್ತಾ ಎಲ್ಲ ಧರ್ಮ‌ಗಳು ನಾಶವಾಗುವಂತೆ ಮಾಡುವುದು. ಹಾಗಾಗಿ, ಅರಿವಿನ ಕೊರತೆಯಿಂದ ಇತಿಹಾಸದಲ್ಲಿ ಆಗುತ್ತಾ ಬಂದಿರುವ ಪ್ರಮಾದವನ್ನು ಸರಿಪಡಿಸಲು ವೈಜ್ಞಾನಿಕ ಚಿಂತನೆಗಳು ಜರುಗಬೇಕಾಗಿವೆ. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಮೂಲಕ ನಂದಿ ಕೃಷಿ ಪುನಶ್ಚೇನದ ಕುರಿತು ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಾಡಿನ ಅನೇಕ ಪೂಜ್ಯರು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯ ಮಟ್ಟದಲ್ಲಿ ಅಭಿಯಾನ ಹೆಸರುವಾಸಿಯಾಗಿದೆ. ಮುಂದುವರೆದು 108 ಗ್ರಾಮಗಳ ನಂದಿ ಕೃಷಿಕರ ಸಮಾವೇಶ ಆಯೋಜಿಸಿ ಈ‌ ಕೆಳಗಿನ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 

ಸರ್ಕಾರಕ್ಕೆ ನಂದಿ ಕೃಷಿಕರ ಹಕ್ಕೊತ್ತಾಯ: 

1. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿ ಗೊಳಿಸಿ.

2. ನಂದಿ ಕೃಷಿ ಪುನಶ್ಚೇತನಕ್ಕಾಗಿ ರಾಜ್ಯದ 10 ಪ್ರತಿಶತ ಬಡ್ಜೆಟ್ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆರೋಗ್ಯ ವರ್ಧಕಗಳು ಹಾಗೂ ನಂದಿ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನಿಡುವ ಕಾನೂನು ಜಾರಿ ಗೊಳಿಸಿ.

 ನಂದಿ ಕೃಷಿಕರಿಗೆ ನ್ಯಾಯ ಒದಗಿಸಲು ಪೂಜ್ಯರ "ನಂದಿ ನಿರ್ಧಾರ" 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅರಿವಿನ ಕೊರತೆಯಿಂದ ಸರ್ವರ ಒಳಿತಿನ ಬಸವ ತತ್ವದ ಮೂಲ ಬೇರಾದ‌ ನಂದಿ ಕೃಷಿ ನಾಶವಾಗುತ್ತಿದೆ. ಅದಕ್ಕಾಗಿ, ನಂದಿ ಕೃಷಿ ಪುನಶ್ಚೇತನಕ್ಕೆ ಪೂರಕ ಯೋಜನೆ ಹಾಗೂ ಕಾನೂನು ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ನಂಬಿದ ದೇವರ ಸಾಕ್ಷಿಯಾಗಿ ಪಕ್ಷಾತೀತವಾಗಿ ಮತ ನೀಡಲು ಪೂಜ್ಯರು ತಮ್ಮ ಭಕ್ತರಿಗೆ ಅರಿವು ಮೂಡಿಸುವ "ನಂದಿ ನಿರ್ಧಾರ" ತೆಗೆದುಕೊಳ್ಳಬೇಕಾದ ಅವಶ್ಯಕತೆ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಿ ಹೆಜ್ಜೆ ಇಡಬಹುದಾಗಿದೆ.

......................................

ಬಸವರಾಜ ಎನ್. ಬಿರಾದಾರ
ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ

Thursday, January 15, 2026

ರೈತರ ಬಸವ ತತ್ವ ಉಳಿಸಲು ಗ್ರಾಮಕ್ಕೊಂದು 'ನಂದಿ ಸೇನೆ' ಸ್ಥಾಪನೆ ಕಾರ್ಯಕ್ರಮ

 


ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ *ನಂದಿ ಕೂಗು* ಅಭಿಯಾನದ ಅಡಿಯಲ್ಲಿ ರೈತರ ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ಗಳನ್ನು ನಿರ್ಮಿಸಲು *'ಗ್ರಾಮಕ್ಕೊಂದು ನಂದಿ ಸೇನೆ'* ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ.

ರೈತರ ಬಸವ ತತ್ವ ಎಂದರೇನು?
ಗ್ರಾಮಗಳಲ್ಲಿ ರೈತರು ಪೂಜಿಸುವ ನಾಲ್ಕು ಕಾಲಿನ ಜೀವಂತ ಬಸವಣ್ಣಗಳು ಅಥವಾ ನಂದಿಗಳು ಅಥವಾ ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗಿ ಗ್ರಾಮೀಣ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ, ನಾಲ್ಕು ಕಾಲಿನ ಬಸವಣ್ಣಗಳ ಶಕ್ತಿಯ ಬಳಕೆಯಿಂದ ಗ್ರಾಮೀಣ ಜನರ ಕಾಯಕ ಹಾಗೂ ದಾಸೋಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವ ಕಲೆಗೆ ರೈತರ ಬಸವ ತತ್ವ ಎಂದು ಕರೆಯಲಾಗುತ್ತದೆ.

 ನಾಲ್ಕು ಕಾಲಿನ ಬಸವಣ್ಣಗಳು ಅಥವಾ ನಂದಿ ಶಕ್ತಿಯಿಂದ ಸ್ವಾವಲಂಬಿ ಗ್ರಾಮ‌ ನಿರ್ಮಿಸುವುದರ ಜೊತೆಗೆ ಆರೋಗ್ಯಯುತ ಸಮಾಜ ನಿರ್ಮಿಸಲು ಬಯಸುವ ದೂರದೃಷ್ಟಿಯ ನಾಯಕರು ತಮ್ಮ ಗ್ರಾಮಗಳಲ್ಲಿ 'ನಂದಿ ಸೇನೆ' ಎಂಬ ಸಂಘ ಸ್ಥಾಪಿಸಿ ಬೆಳೆಸಲು ಪ್ರಾರಂಭಿಸಬಹುದಾಗಿದೆ.

................................................
🙏🇮🇳 ಹಿನ್ನೆಲೆ: 🇮🇳🙏


ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರ ನೇತೃತ್ವದಲ್ಲಿ ಪ್ರಾರಂಭಿಸಿದ ನಂದಿ ಕೂಗು ಅಭಿಯಾನದ ವತಿಯಿಂದ ರಾಜ್ಯಾದ್ಯಂತ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ರೈತರ ಬಸವ ತತ್ವ ಅಥವಾ ನಂದಿ ತತ್ವದ ಕುರಿತು ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ. ಮುಂದುವರೆದು, ಶ್ರೀ ಸಿದ್ಧೇಶ್ವರ ಶ್ರೀಗಳ 3ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ 330 ಜೋಡೆತ್ತಿನ ಬಂಡಿಗಳ ಸಮಾವೇಶದ ಸಂದರ್ಭದಲ್ಲಿ *'ನಂದಿ ಸೇನೆ'* ಎಂಬ ರಾಷ್ಟ್ರ ಮಟ್ಟದ ಸಂಘಟನೆ ಸ್ಥಾಪನೆಗೆ ವೈಕುಂಠ ಏಕಾದಶಿಯ ದಿನವಾದ 30-12-2025 ರ ಮಂಗಳವಾರ ಚಾಲನೆ ನೀಡಲಾಯಿತು. ಪೂಜ್ಯರಿಗೆ ಜ್ಞಾನೋದಯವಾದ ಸ್ಥಳವಾದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶ್ರೀ ಸನ್ಯಾಸಪ್ಪನ ಮಠ (ರಾಮೇಶ್ವರ ಮಠ) ದಲ್ಲಿ ನಂದಿ ಸೇನೆ ಸಂಘಟನೆಗೆ ಚಾಲನೆ ದೊರೆಯಿತು. 

ನಂದಿ ಸೇನೆ ಸಂಘಟನೆಗೆ ಚಾಲನೆ ನೀಡಿದವರ ವಿವರ:

1. ಶ್ರೀ ಶಶಿಕಾಂತ ಗುರೂಜಿ, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. 
2. ಶ್ರೀ ಸೋಮಲಿಂಗ ಅಜ್ಜನವರು, ಸಾಹಿತಿ ಹಾಗೂ ಶ್ರೀ ಸಿದ್ಧೇಶ್ವರ ಶ್ರೀಗಳ ಸಹೋದರ
3. ಶ್ರೀ ಚುನ್ನಪ್ಪ ಪೂಜಾರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
4. ಶ್ರೀ ಭೀಮಸೇನ ಕೋಕರೆ, ರಾಜ್ಯಾಧ್ಯಕ್ಷರು, ಭಾರತೀಯ ಕಿಸಾನ್ ಸಂಘ
5. ಶ್ರೀ ವೆಂಕನಗೌಡ ಪಾಟೀಲ, ನಿರ್ದೇಶಕರು, ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು
6. ಶ್ರೀ ಮಲ್ಲಿಕಾರ್ಜುನ ಲಕ್ಕಪ್ಪ ಕೋರಿ, ಅಂತರಾಷ್ಟ್ರೀಯ ಕೃಷಿ ಉದ್ದಿಮೆದಾರರು, ಕೀನ್ಯಾ

 ನಂದಿ ಸೇನೆ ಉದ್ದೇಶ: ರೈತರ ಬಸವ ತತ್ವ ಅಥವಾ ನಂದಿ ಶಕ್ತಿಯ ಬಳಕೆಯಿಂದ ಸ್ವಾವಲಂಬಿ ಗ್ರಾಮಗಳನ್ನು ಬೆಳೆಸಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು.

 ನಂದಿ ಸೇನೆ ಗುರಿ: ರೈತರ ಬಸವ ತತ್ವ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ 10 ಪ್ರತಿಶತ ಬಡ್ಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವಂತೆ ಮಾಡುವುದು. ಈ ಮೂಲಕ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಿಸಿ ಸ್ವಾವಲಂಬಿ ಹಾಗೂ ಆರೋಗ್ಯಯುತ ಗ್ರಾಮಗಳನ್ನು ನಿರ್ಮಿಸುವುದು.

 ನಂದಿ ಸೇನೆ ಬೆಳೆಸುವ ಪ್ರಕ್ರಿಯೆ: ಹೊಸ ತಂತ್ರಜ್ಞಾನಗಳಿಂದ ನಂದಿ ವಿದ್ಯತ್, ನಂದಿ ಗ್ಯಾಸ್,  ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ಗ್ರಾಮಗಳಲ್ಲಿ ತಯಾರಿಸುವುದು. ನಾಯಕರು, ನಂದಿ ಕೃಷಿಕರು, ನಂದೀಶ್ವರನ ಆರಾಧಕರು ಹಾಗೂ ಆಹಾರ ಸೇವಿಸುವವರ ನೇತೃತ್ವದಲ್ಲಿ ನಂದಿ ಸೇನೆ ಸಂಘಟನೆ ಬೆಳೆಸುತ್ತಾ ಸಾಗಿ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಮಾಡುವುದು. 

 ನಂದಿ ಸೇನೆ ಸಂಘಟನೆ ಕೇಂದ್ರಗಳು: ಬಸವ ತತ್ವ ಅಥವಾ ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ಹಿಂದೆ ನಿರ್ಮಿಸಲಾಗಿರುವ ರಾಷ್ಟ್ರದ ವಿವಿಧ ಶಕ್ತಿ ಕೇಂದ್ರಗಳು ಅಥವಾ ಧಾರ್ಮಿಕ ಕೇಂದ್ರಗಳ ಆಧಾರಿತವಾಗಿ ನಂದಿ ಸೇನೆಯನ್ನು ಸಂಘಟಿಸುವುದು.

 ನಂದಿ ಸೇನೆ ಗುರುತು: ಜೋಡೆತ್ತಿನ ರೈತರಿಗೆ ಸಂತರ ನಂತರದ ಸ್ಥಾನ ನೀಡಿ ಕಾಶಿ ಕೆಂಪು ಬಣ್ಣದ ವಸ್ತ್ರ ಹಾಗೂ ನಂದಿ ಸೇನೆ ಎಂದು ಬರೆದಿರುವ ಟೋಪಿ ಹಾಕಿ ಗೌರವಿಸುವುದು.

 ಪ್ರಮುಖ ಮಾರ್ಗದರ್ಶಕರು:

1. ಡಾ ಚಂದ್ರಶೇಖರ ಬಿರಾದಾರ, ಅಂತರಾಷ್ಟ್ರೀಯ ಕೃಷಿ ವಿಜ್ಞಾನಿಗಳು, ಬೆಂಗಳೂರು
2. ಡಾ ವಿ ಆಯ್ ಬೆಣಗಿ, ವಿಶ್ರಾಂತ ಉಪ ಕುಲಪತಿಗಳು, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ
3. ಶ್ರೀ ಮಲ್ಲಿಕಾರ್ಜುನ ಹಟ್ಟಿ, ಖ್ಯಾತ ಸಿರಿಧಾನ್ಯ ಹೊಟೇಲ್ ಉದ್ದಿಮೆದಾರರು, ವಿಜಯಪುರ





.............................................
 🙏🇮🇳 ಮುನ್ನೆಲೆ🇮🇳🙏

ಗ್ರಾಮಗಳಲ್ಲಿ ನಂದಿ ಸೇನೆ ಸಂಘಟನೆ ಬೆಳೆಸುವ ಜವಾಬ್ದಾರಿ ಯಾರು ಹೊರಬೇಕು?

1. ನಾಯಕರು: ಹಿಂದೆ ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತಂದ ರಾಜ ಮಹಾರಾಜರು ಶ್ರೇಷ್ಠ ಸಾಮ್ರಾಜ್ಯಗಳನ್ನು ನಿರ್ಮಿಸಿ ಇತಿಹಾಸದ ಪುಟ ಸೇರಿದ ಉದಾಹರಣೆಗಳಿವೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಜನನಾಯಕರಾದ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಪಂಚಾಯತಿ ಸದಸ್ಯರು, ಶಾಸಕರು ಹಾಗೂ ಸಂಸದರು, ತಮ್ಮ ತಮ್ಮ ಮತ ಕ್ಷೇತ್ರದಲ್ಲಿ ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತಂದು ಗ್ರಾಮಗಳನ್ನು ಸ್ವಾವಲಂಬಿಗೊಳಿಸಿ ಆರೋಗ್ಯಯುತ ಸಮಾಜ ನಿರ್ಮಿಸಬೇಕಾದ ಅವಶ್ಯಕತೆ ಬಂದೊದಗಿದೆ. ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವವರಿಗೆ ಮತ ನೀಡುವ ಹಾಗೂ ಮತ ಪಡೆದು ನಾಯಕರಾಗುವ ಇಬ್ಬರಿಗೂ ಕೂಡ ಒಳಿತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಂದಿ ಸೇನೆಯನ್ನು ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು ಹೊರುವ ನಾಯಕರು ಮಾತ್ರ ನಿಜವಾದ ಜನನಾಯಕರು ಎಂದು ಗುರುತಿಸುವ ದಿನಗಳು ಈಗಾಗಲೇ ಪ್ರಾರಂಭವಾಗಿವೆ. ಹಾಗಾಗಿ, ಭವಿಷ್ಯದಲ್ಲಿ ರಾಜಕೀಯ ನಾಯಕರ ಭವಿಷ್ಯ ರೈತರ ಬಸವ ತತ್ವದ ಮೇಲೆ ನಿಲ್ಲುವುದು ನಿಶ್ಚಿತವಾಗಿದೆ.
2. ನಂದಿ / ಜೋಡೆತ್ತಿನ ಕೃಷಿಕರು: ಬಸವ ತತ್ವದ ಮೂಲ ವಾರಸುದಾರರಾದ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹಾಗೂ ಆಕಳು ಸಾಕಾಣಿಕೆದಾರರು ಒಂದಾಗಿ ತಮ್ಮ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟಿತರಾಗಿ ಆಗ್ರಹಿಸಬೇಕಾಗಿದೆ. ರೈತರ ಬಸವ ತತ್ವಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಜನರಿಗೆ ಆರೋಗ್ಯ ನೀಡಲು ಬಯಸುವ ನಾಯಕರಿಗೆ ಮತ ನೀಡುವ ಸಂಕಲ್ಪ ಮಾಡಬೇಕು.
3. ನಂದೀಶ್ವರನ ಆರಾಧಕರು: ಅನೇಕ ಜನರ ಮನೆಯ ದೇವರು ನಾಲ್ಕು ಕಾಲಿನ ಬಸವಣ್ಣ ಅಥವಾ ನಂದೀಶ್ವರ ನಾಗಿದ್ದಾನೆ. ಬಹು ಜನರ ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಶಿವನ ಆರಾಧಕರು ಶಿವಲಿಂಗದ ಮುಂದಿರುವ ನಂದಿಗೆ ತಲೆ ಬಾಗುತ್ತಾರೆ. ಇವರೆಲ್ಲರೂ, ಒಂದಾಗಿ ವಾಸ್ತವದಲ್ಲಿ ನಂದಿ ಸಂಪತ್ತನ್ನು ಹೆಚ್ಚಿಸಲು ತನು ಮನ ಧನವನ್ನು ಕೂಡಿಸಿ ಪ್ರಯತ್ನಿಸಿ ನಂಬಿದ ದೇವರ ಕೃಪೆಗೆ ಪಾತ್ರರಾಗುವ ಅವಕಾಶ ಬಂದೊದಗಿದೆ. ಅದಕ್ಕಾಗಿ, ನಂದೀಶ್ವರನ ಆರಾಧಕರು ನಂದಿ ಸೇನೆಯನ್ನು ಸಂಘಟಿಸಿ ತಮ್ಮ ಗ್ರಾಮದಲ್ಲಿ ನಂದಿ ಸಂತತಿಯನ್ನು ಹೆಚ್ಚಿಸುವ ಜವಾಬ್ದಾರಿ ಹೊರಬೇಕಾಗಿದೆ. ರೈತರ ಬಸವ ತತ್ವ ಪುನಶ್ಚೇತನಗೊಳಿಸಲು ಬಯಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡುವ ಸಂಕಲ್ಪ‌ ಮಾಡುವುದು.
4. ಆಹಾರ ಸೇವಿಸುವವರು: ಆಹಾರ ಸೇವಿಸುವ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ಹೊರಬೇಕಾಗಿದೆ. ಏಕೆಂದರೆ, ಹಿಂದೆ ನಾಲ್ಕು ಕಾಲಿನ ಬಸವಣ್ಣಗಳ ಉಳುಮೆಯಿಂದ ನಿರ್ಮಾಣವಾದ ಫಲವತ್ತಾದ ಜಮೀನುಗಳಲ್ಲಿ ಬೆಳೆದ ಆಹಾರ ಸೇವಿಸುತ್ತಾ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಆದರೆ, ಇಂದು ನಾಲ್ಕು ಕಾಲಿನ ಬಸವಣ್ಣಗಳ ಬಸವ ತತ್ವದ ಬದಲು ತೈಲ ತತ್ವ ಆಧಾರಿತ ಯಂತ್ರ ಹಾಗೂ ರಾಸಾಯನಿಕ ಕೃಷಿ ಹೆಚ್ಚಾದಂತೆ ನಾವು ತಿನ್ನುವ ಆಹಾರ ವಿಷಮಯವಾಗಿ ರೋಗಗ್ರಸ್ತ ಸಮಾಜ ನಿರ್ಮಾಣವಾಗುತ್ತಿದೆ. ಇದು ಜಗತ್ತಿನಲ್ಲಿ ರೋಗ ಕ್ರಾಂತಿಯನ್ನು ಉಂಟು ಮಾಡುತ್ತಿದೆ. ಅದಕ್ಕಾಗಿ, ತಮಗೆ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಆಹಾರ ಬೇಕೆನ್ನುವವರು ನಂದಿ ಸೇನೆ ಸಂಘಟನೆ ಬೆಳೆಸುವ ಜವಾಬ್ದಾರಿ ಹೊರಬೇಕಾಗಿದೆ. ರೈತರ ಬಸವ ತತ್ವ ಪುನಶ್ಚೇತನಗೊಳಿಸಲು ಬಯಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡುವ ಸಂಕಲ್ಪ‌ ಮಾಡುವುದು.

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com


Monday, December 15, 2025

ಬನ್ನಿ! ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ಗಳನ್ನು ನಿರ್ಮಿಸಲು ಒಂದಾಗೋಣ.

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ 3ನೇ ಪುಣ್ಯ ಸ್ಮರಣೆಯ ಅಂಗವಾಗಿ ನಂದಿ ಕೂಗು ಅಭಿಯಾನದ ಅಡಿಯಲ್ಲಿ ಕನಿಷ್ಟ 330 ಜೋಡೆತ್ತಿನ ಬಂಡಿಗಳ ಸಮಾವೇಶ ಹಾಗೂ ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಕುರಿತು ವೈಜ್ಞಾನಿಕ ಚಿಂತನೆ ಕಾರ್ಯಕ್ರಮ ಜರಗುವುದು.

ಸ್ಥಳ: ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಆಧ್ಯಾತ್ಮಿಕ ಪ್ರಪಂಚಕ್ಕೆ ಪಾದಾರ್ಪಣೆ ಮಾಡಲು ಮೊದಲು ಪ್ರೇರಣೆ ನೀಡಿದ ಬಿಜ್ಜರಗಿ ಗ್ರಾಮದ ಶ್ರೀ ಸನ್ಯಾಸಪ್ಪನ ಮಠ (ರಾಮೇಶ್ವರ ಮಠ), ತಾ: ತಿಕೋಟಾ ಜಿ: ವಿಜಯಪುರ  

ದಿನಾಂಕ: ವೈಕುಂಠ ಏಕಾದಶಿಯ ದಿನವಾದ 30-12-2025 ರ ಮಂಗಳವಾರ ಮುಂಜಾನೆ 10 ಗಂಟೆಗೆ

 🇳🇪 ವಿಷಯ ವಿಶ್ಲೇಷಣೆ 🇳🇪

 ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಕುರಿತು ವೈಜ್ಞಾನಿಕ ಚಿಂತನೆ

ಬಸವ ತತ್ವವೆಂದರೆ ಜೋಡೆತ್ತಿನ ರೈತರು ತಮ್ಮ ಕಾಯಕದಿಂದ ಪಂಚ ಮಹಾಭೂತಗಳ ಜೀವಂತಿಕೆಯನ್ನು ಉಳಿಸುವುದರ ಜೊತೆಗೆ ಕಾಯಕ ಹಾಗೂ ದಾಸೋಹ ಸಂಸ್ಕೃತಿ ನಾಶವಾಗದಂತೆ‌ ನೋಡಿಕೊಳ್ಳುವ ಕಲೆ‌ ಎಂದು ಅರ್ಥ. ಜೋಡೆತ್ತಿನ ರೈತರು ಉಳಿದರೆ ಮಾತ್ರ ಬಸವ ತತ್ವ ಉಳಿಯುವುದು ಎಂಬುದು ಇಂದಿನ ಆಧುನಿಕ ವಿಜ್ಞಾನ, ಇತಿಹಾಸ ಹಾಗೂ ವಚನ ಸಾಹಿತ್ಯದಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಉಳಿದಿರುವ ಗ್ರಾಮಗಳಲ್ಲಿ ಪಂಚ ಮಹಾಭೂತಗಳು ಶುದ್ಧವಾಗಿ ಉಳಿದಿರುವುದರ ಜೊತೆಗೆ ಬಹು ಜನರಿಗೆ ಉದ್ಯೋಗದ ಭದ್ರತೆ ಇರುವುದನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿ ನೋಡಬಹುದಾಗಿದೆ.

ಐದು ಸಾವಿರ ವರ್ಷಗಳ ಹಿಂದೆ ನೈಸರ್ಗಿಕ ವಿಕೋಪದಿಂದ ವಿಶ್ವ ಪ್ರಸಿದ್ಧವಾದ ಸಿಂಧೂ ನದಿ ಕಣಿವೆಯ ಹರಪ್ಪಾ ಮೊಹೆಂಜೋದಾರೊ ನಾಗರೀಕತೆ ನಾಶವಾದಂತೆ, ಇಂದು ನೈಸರ್ಗಿಕ ವಿಕೋಪ ಅಥವಾ ಮಹಾಯುದ್ಧದಿಂದ ಭಾರತ ದೇಶಕ್ಕೆ ಮುಂದಿನ ಐದು ವರ್ಷಗಳ ವರೆಗೆ ತೈಲ ಪೂರೈಕೆ ಸಂಪೂರ್ಣವಾಗಿ ನಿಂತು ಹೋದರೆ, ಜೋಡೆತ್ತಿನ ಕೃಷಿಕರಿರುವ ಭೂ ಪ್ರದೇಶದ ಮಠ‌ ಮಾನ್ಯಗಳ ಕಾಯಕ ಹಾಗೂ ದಾಸೋಹ ಮಾತ್ರ ಜೀವಂತವಾಗಿ ಉಳಿಯಲು ಸಾಧ್ಯವಾಗುವುದು‌. ಹಾಗಾಗಿ, ಕಾಯಕ ಹಾಗೂ ದಾಸೋಹದ ಜೀವಂತಿಕೆ ನಾಲ್ಕು ಕಾಲಿನ ಬಸವಣ್ಣಗಳ ಸಂತತಿಯನ್ನು ಅವಲಂಬಿಸಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕ್ರಿಸ್ತಶಕ 6 ರಿಂದ 12 ನೇ ಶತಮಾನದ ಕಾಲಘಟ್ಟದಲ್ಲಿ ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ರಾಜರುಗಳು ಸುಸಂಸ್ಕೃತ ಸಮಾಜ ನಿರ್ಮಿಸಿದರು. ರಾಷ್ಟ್ರಕೂಟರು, ಚಾಲುಕ್ಯರು, ಚೋಳರು, ಹೊಯ್ಸಳರು, ಕದಂಬರು, ಪಲ್ಲವರು, ಪಾಂಡ್ಯರು ಹೀಗೆ ಅನೇಕ ಸಾಮ್ರಾಜ್ಯದ ರಾಜರುಗಳು ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ಶ್ರೇಷ್ಠ ಸಾಮ್ರಾಜ್ಯಗಳನ್ನು‌ ನಿರ್ಮಿಸಿದ ನಂತರ ವಿವಿಧ ಹೆಸರಿನ ಶಿವಾಲಯಗಳನ್ನು ನಿರ್ಮಿಸಿ ಶಿವಲಿಂಗದ ಮುಂದೆ ನಂದಿ ಮೂರ್ತಿ ಪ್ರತಿಷ್ಠಾಪಿಸಿದರು. ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದ ಫಲದಿಂದ ನಿರ್ಮಿತವಾದ ಲಕ್ಷಾಂತರ ಶಿವಾಲಯಗಳು ಭಾರತ ದೇಶದ ಬಹು ಜನರ ಆರಾಧ್ಯ ದೈವವಾಗಿ ತಲೆ ಎತ್ತಿ ನಿಂತಿವೆ. ಪ್ರತಿಯೊಂದು ಶಿವಾಲಯದಲ್ಲಿರುವ ನಂದಿ ಮೂರ್ತಿಯು ಭಾರತ ದೇಶದ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿವೆ
"ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದವ ತೋರಿ‌ ಬದುಕಿಸಯ್ಯಾ, ಆತನ ತನು ಶುದ್ಧ, ಆತನ‌ ಮನ ಶುದ್ಧ, ಆತನ ಮನೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರು ಪಾವನ ನೋಡಾ ಕೂಡಲ‌ ಸಂಗಮದೇವ" ಎಂಬ ವಚನದ ಮೂಲಕ ವಿಶ್ವಗುರು ಬಸವಣ್ಣನವರು ಜೋಡೆತ್ತಿನ ಕೃಷಿಕರ ಬಸವ ತತ್ವದ ಮಹತ್ವವನ್ನು ತಿಳಿಸಿದ್ದಾರೆ. ಸಮಾಜದಲ್ಲಿ ಜೋಡೆತ್ತಿನ ಕೃಷಿಕರ ಪಾದಗಳ ಕೊರತೆಯಾದರೆ ಸಮಾಜದ‌ ಮಾರ್ಗದರ್ಶಕರಾದ ಗುರುಗಳಿಗೆ ಭವಿಷ್ಯವಿಲ್ಲವೆಂಬುದನ್ನು ಬಸವಣ್ಣನವರು ಸ್ಪಷ್ಟವಾಗಿ ತಿಳಿಸಿದ್ದಾರೆ. ನಂದಿಯು ಯುಗ ಯುಗಾಂತರಗಳಿಂದ ಗುರು ಶಿಷ್ಯ ಪರಂಪರೆಯ ಮೂಲ ಕೊಂಡಿಯಾಗಿ ಕೆಲಸ‌ ಮಾಡುತ್ತಾ ಬರುತ್ತಿರುವ ಕಾರಣ ಗುರುವೆಂಬ ಲಿಂಗದ ಮುಂದೆ ಅಥವಾ ಗುರುವಿನ ಸಮಾಧಿಯ‌ ಮೇಲೆ ನಂದಿ‌ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತಿದೆ.

   

ಕಳೆದ ಕೆಲವು ದಶಕಗಳಲ್ಲಿ ಜೋಡೆತ್ತಿನ ಕೃಷಿಕರ ಬಸವ ತತ್ವಕ್ಕೆ ವಿರುದ್ಧವಾದ ಪೆಟ್ರೋಲ್ ಹಾಗೂ ಡೀಸೆಲ್ ಆಧಾರಿತ ತೈಲ ತತ್ವಕ್ಕೆ ಸರ್ಕಾರಗಳು ಹೆಚ್ಚು ಆದ್ಯತೆ ನೀಡುತ್ತಾ ಬಂದ ಕಾರಣ ಜೋಡೆತ್ತಿನ ಕೃಷಿಕರು ನಾಶವಾಗಿ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಾ ಸಾಗುತ್ತಿವೆ. ಜೋಡೆತ್ತಿನ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ಗ್ರಾಮಗಳಲ್ಲಿ ಇತರ ಪಶು ಸಂಪತ್ತು ನಾಶವಾಗಿ ಎಲ್ಲ ರೈತರಿಗೂ ಕೂಡ ತಿಪ್ಪೆ ಗೊಬ್ಬರದ ಕೊರತೆಯಾಗುತ್ತಿದೆ. ಇದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಬೆಳೆಗಳ ಗುಣಮಟ್ಟ ಮತ್ತು ಇಳುವರಿ ಕುಂಠಿತವಾಗುತ್ತಿದೆ. ಜೋಡೆತ್ತಿನ ಕೃಷಿ ನಾಶವಾದಂತೆ ರೈತರ ಸಾಗುವಳಿ ವೆಚ್ಚ ಹೆಚ್ಚಾಗುತ್ತಿದೆ. ರೈತರ ಸಾಲ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ದಿನಕಳೆದಂತೆ ರೈತರು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.  ಅದಕ್ಕಾಗಿ, ಜೋಡೆತ್ತಿನ‌ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ಬಸವ ತತ್ವ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೂಡ ಕೈ ಜೋಡಿಸಬೇಕಾದ ಅವಶ್ಯಕತೆ ಬಂದೊದಗಿದೆ.   

 
ಆಧುನಿಕ ತಂತ್ರಜ್ಞಾನಗಳಿಂದ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಕೆ‌ ಮಾಡಿಕೊಂಡು ವಿದ್ಯುತ್, ಗ್ಯಾಸ್, ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ಉತ್ಪಾದಿಸುವ ಸಮಗ್ರ ಯೋಜನೆಯನ್ನು ಜಾರಿಗೆ ತಂದು ರೈತರನ್ನು ಹಾಗೂ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ, ರೈತ ನಾಯಕರು, ಔದ್ಯೋಗಿಕ ನಾಯಕರು, ರಾಜಕೀಯ‌ ನಾಯಕರು ಹಾಗೂ ಆಧ್ಯಾತ್ಮಿಕ‌ ನಾಯಕರು ಒಗ್ಗೂಡಿ ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಹೊಸ ತಂತ್ರಜ್ಞಾನಗಳು ಹಾಗೂ ಜೊಡೆತ್ತಿನ‌ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿ ಮಾಡಬಹುದಾದ ಸಾಧ್ಯತೆಯ ಕುರಿತು‌ ವೈಜ್ಞಾನಿಕವಾಗಿ ಚಿಂತನೆ‌ ಮಾಡುವ ಉದ್ದೇಶದಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸರ್ವರಿಗೂ ಕೂಡ ಒಳಿತನ್ನು ಉಂಟುಮಾಡುವ ಕಾರ್ಯವಾಗಿದೆ...ಯೋಚಿಸಿ!


ಬಸವ ತತ್ವದಿಂದ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸುವ ಸಾಧ್ಯತೆಯ ಕುರಿತು ಬರೆದಿರುವ  *ಜೈ ನಂದಿ ಜೈ ಜಗತ್'* ಪುಸ್ತಕ ಪಡೆಯಲು ಸಂಪರ್ಕಿಸಿ:

 https://drive.google.com/file/d/1vhlKlRA5v17fecKBtEKzgP6UwGyKl7hk/view?usp=drivesdk


ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ ನಿರ್ಮಿಸುವ ಕುರಿತು ದಿನನಿತ್ಯ ಮಾಹಿತಿ ಪಡೆಯಲು ನಂದಿ ಕೂಗು ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ:
https://chat.whatsapp.com/ISXmGKm5WFF4ycv431Tsnm?mode=hqrt2 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 

9449662047 / 9110885321 

missionsavesoil.com


 

 

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...