Thursday, January 15, 2026

ರೈತರ ಬಸವ ತತ್ವ ಉಳಿಸಲು ಗ್ರಾಮಕ್ಕೊಂದು 'ನಂದಿ ಸೇನೆ' ಸ್ಥಾಪನೆ ಕಾರ್ಯಕ್ರಮ

 


ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ *ನಂದಿ ಕೂಗು* ಅಭಿಯಾನದ ಅಡಿಯಲ್ಲಿ ರೈತರ ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ಗಳನ್ನು ನಿರ್ಮಿಸಲು *'ಗ್ರಾಮಕ್ಕೊಂದು ನಂದಿ ಸೇನೆ'* ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ.

ರೈತರ ಬಸವ ತತ್ವ ಎಂದರೇನು?
ಗ್ರಾಮಗಳಲ್ಲಿ ರೈತರು ಪೂಜಿಸುವ ನಾಲ್ಕು ಕಾಲಿನ ಜೀವಂತ ಬಸವಣ್ಣಗಳು ಅಥವಾ ನಂದಿಗಳು ಅಥವಾ ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗಿ ಗ್ರಾಮೀಣ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ, ನಾಲ್ಕು ಕಾಲಿನ ಬಸವಣ್ಣಗಳ ಶಕ್ತಿಯ ಬಳಕೆಯಿಂದ ಗ್ರಾಮೀಣ ಜನರ ಕಾಯಕ ಹಾಗೂ ದಾಸೋಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವ ಕಲೆಗೆ ರೈತರ ಬಸವ ತತ್ವ ಎಂದು ಕರೆಯಲಾಗುತ್ತದೆ.

 ನಾಲ್ಕು ಕಾಲಿನ ಬಸವಣ್ಣಗಳು ಅಥವಾ ನಂದಿ ಶಕ್ತಿಯಿಂದ ಸ್ವಾವಲಂಬಿ ಗ್ರಾಮ‌ ನಿರ್ಮಿಸುವುದರ ಜೊತೆಗೆ ಆರೋಗ್ಯಯುತ ಸಮಾಜ ನಿರ್ಮಿಸಲು ಬಯಸುವ ದೂರದೃಷ್ಟಿಯ ನಾಯಕರು ತಮ್ಮ ಗ್ರಾಮಗಳಲ್ಲಿ 'ನಂದಿ ಸೇನೆ' ಎಂಬ ಸಂಘ ಸ್ಥಾಪಿಸಿ ಬೆಳೆಸಲು ಪ್ರಾರಂಭಿಸಬಹುದಾಗಿದೆ.

................................................
🙏🇮🇳 ಹಿನ್ನೆಲೆ: 🇮🇳🙏


ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರ ನೇತೃತ್ವದಲ್ಲಿ ಪ್ರಾರಂಭಿಸಿದ ನಂದಿ ಕೂಗು ಅಭಿಯಾನದ ವತಿಯಿಂದ ರಾಜ್ಯಾದ್ಯಂತ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ರೈತರ ಬಸವ ತತ್ವ ಅಥವಾ ನಂದಿ ತತ್ವದ ಕುರಿತು ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ. ಮುಂದುವರೆದು, ಶ್ರೀ ಸಿದ್ಧೇಶ್ವರ ಶ್ರೀಗಳ 3ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ 330 ಜೋಡೆತ್ತಿನ ಬಂಡಿಗಳ ಸಮಾವೇಶದ ಸಂದರ್ಭದಲ್ಲಿ *'ನಂದಿ ಸೇನೆ'* ಎಂಬ ರಾಷ್ಟ್ರ ಮಟ್ಟದ ಸಂಘಟನೆ ಸ್ಥಾಪನೆಗೆ ವೈಕುಂಠ ಏಕಾದಶಿಯ ದಿನವಾದ 30-12-2025 ರ ಮಂಗಳವಾರ ಚಾಲನೆ ನೀಡಲಾಯಿತು. ಪೂಜ್ಯರಿಗೆ ಜ್ಞಾನೋದಯವಾದ ಸ್ಥಳವಾದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶ್ರೀ ಸನ್ಯಾಸಪ್ಪನ ಮಠ (ರಾಮೇಶ್ವರ ಮಠ) ದಲ್ಲಿ ನಂದಿ ಸೇನೆ ಸಂಘಟನೆಗೆ ಚಾಲನೆ ದೊರೆಯಿತು. 

ನಂದಿ ಸೇನೆ ಸಂಘಟನೆಗೆ ಚಾಲನೆ ನೀಡಿದವರ ವಿವರ:

1. ಶ್ರೀ ಶಶಿಕಾಂತ ಗುರೂಜಿ, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. 
2. ಶ್ರೀ ಸೋಮಲಿಂಗ ಅಜ್ಜನವರು, ಸಾಹಿತಿ ಹಾಗೂ ಶ್ರೀ ಸಿದ್ಧೇಶ್ವರ ಶ್ರೀಗಳ ಸಹೋದರ
3. ಶ್ರೀ ಚುನ್ನಪ್ಪ ಪೂಜಾರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
4. ಶ್ರೀ ಭೀಮಸೇನ ಕೋಕರೆ, ರಾಜ್ಯಾಧ್ಯಕ್ಷರು, ಭಾರತೀಯ ಕಿಸಾನ್ ಸಂಘ
5. ಶ್ರೀ ವೆಂಕನಗೌಡ ಪಾಟೀಲ, ನಿರ್ದೇಶಕರು, ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು
6. ಶ್ರೀ ಮಲ್ಲಿಕಾರ್ಜುನ ಲಕ್ಕಪ್ಪ ಕೋರಿ, ಅಂತರಾಷ್ಟ್ರೀಯ ಕೃಷಿ ಉದ್ದಿಮೆದಾರರು, ಕೀನ್ಯಾ

 ನಂದಿ ಸೇನೆ ಉದ್ದೇಶ: ರೈತರ ಬಸವ ತತ್ವ ಅಥವಾ ನಂದಿ ಶಕ್ತಿಯ ಬಳಕೆಯಿಂದ ಸ್ವಾವಲಂಬಿ ಗ್ರಾಮಗಳನ್ನು ಬೆಳೆಸಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು.

 ನಂದಿ ಸೇನೆ ಗುರಿ: ರೈತರ ಬಸವ ತತ್ವ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ 10 ಪ್ರತಿಶತ ಬಡ್ಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವಂತೆ ಮಾಡುವುದು. ಈ ಮೂಲಕ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಿಸಿ ಸ್ವಾವಲಂಬಿ ಹಾಗೂ ಆರೋಗ್ಯಯುತ ಗ್ರಾಮಗಳನ್ನು ನಿರ್ಮಿಸುವುದು.

 ನಂದಿ ಸೇನೆ ಬೆಳೆಸುವ ಪ್ರಕ್ರಿಯೆ: ಹೊಸ ತಂತ್ರಜ್ಞಾನಗಳಿಂದ ನಂದಿ ವಿದ್ಯತ್, ನಂದಿ ಗ್ಯಾಸ್,  ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ಗ್ರಾಮಗಳಲ್ಲಿ ತಯಾರಿಸುವುದು. ನಾಯಕರು, ನಂದಿ ಕೃಷಿಕರು, ನಂದೀಶ್ವರನ ಆರಾಧಕರು ಹಾಗೂ ಆಹಾರ ಸೇವಿಸುವವರ ನೇತೃತ್ವದಲ್ಲಿ ನಂದಿ ಸೇನೆ ಸಂಘಟನೆ ಬೆಳೆಸುತ್ತಾ ಸಾಗಿ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಮಾಡುವುದು. 

 ನಂದಿ ಸೇನೆ ಸಂಘಟನೆ ಕೇಂದ್ರಗಳು: ಬಸವ ತತ್ವ ಅಥವಾ ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ಹಿಂದೆ ನಿರ್ಮಿಸಲಾಗಿರುವ ರಾಷ್ಟ್ರದ ವಿವಿಧ ಶಕ್ತಿ ಕೇಂದ್ರಗಳು ಅಥವಾ ಧಾರ್ಮಿಕ ಕೇಂದ್ರಗಳ ಆಧಾರಿತವಾಗಿ ನಂದಿ ಸೇನೆಯನ್ನು ಸಂಘಟಿಸುವುದು.

 ನಂದಿ ಸೇನೆ ಗುರುತು: ಜೋಡೆತ್ತಿನ ರೈತರಿಗೆ ಸಂತರ ನಂತರದ ಸ್ಥಾನ ನೀಡಿ ಕಾಶಿ ಕೆಂಪು ಬಣ್ಣದ ವಸ್ತ್ರ ಹಾಗೂ ನಂದಿ ಸೇನೆ ಎಂದು ಬರೆದಿರುವ ಟೋಪಿ ಹಾಕಿ ಗೌರವಿಸುವುದು.

 ಪ್ರಮುಖ ಮಾರ್ಗದರ್ಶಕರು:

1. ಡಾ ಚಂದ್ರಶೇಖರ ಬಿರಾದಾರ, ಅಂತರಾಷ್ಟ್ರೀಯ ಕೃಷಿ ವಿಜ್ಞಾನಿಗಳು, ಬೆಂಗಳೂರು
2. ಡಾ ವಿ ಆಯ್ ಬೆಣಗಿ, ವಿಶ್ರಾಂತ ಉಪ ಕುಲಪತಿಗಳು, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ
3. ಶ್ರೀ ಮಲ್ಲಿಕಾರ್ಜುನ ಹಟ್ಟಿ, ಖ್ಯಾತ ಸಿರಿಧಾನ್ಯ ಹೊಟೇಲ್ ಉದ್ದಿಮೆದಾರರು, ವಿಜಯಪುರ





.............................................
 🙏🇮🇳 ಮುನ್ನೆಲೆ🇮🇳🙏

ಗ್ರಾಮಗಳಲ್ಲಿ ನಂದಿ ಸೇನೆ ಸಂಘಟನೆ ಬೆಳೆಸುವ ಜವಾಬ್ದಾರಿ ಯಾರು ಹೊರಬೇಕು?

1. ನಾಯಕರು: ಹಿಂದೆ ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತಂದ ರಾಜ ಮಹಾರಾಜರು ಶ್ರೇಷ್ಠ ಸಾಮ್ರಾಜ್ಯಗಳನ್ನು ನಿರ್ಮಿಸಿ ಇತಿಹಾಸದ ಪುಟ ಸೇರಿದ ಉದಾಹರಣೆಗಳಿವೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಜನನಾಯಕರಾದ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಪಂಚಾಯತಿ ಸದಸ್ಯರು, ಶಾಸಕರು ಹಾಗೂ ಸಂಸದರು, ತಮ್ಮ ತಮ್ಮ ಮತ ಕ್ಷೇತ್ರದಲ್ಲಿ ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತಂದು ಗ್ರಾಮಗಳನ್ನು ಸ್ವಾವಲಂಬಿಗೊಳಿಸಿ ಆರೋಗ್ಯಯುತ ಸಮಾಜ ನಿರ್ಮಿಸಬೇಕಾದ ಅವಶ್ಯಕತೆ ಬಂದೊದಗಿದೆ. ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವವರಿಗೆ ಮತ ನೀಡುವ ಹಾಗೂ ಮತ ಪಡೆದು ನಾಯಕರಾಗುವ ಇಬ್ಬರಿಗೂ ಕೂಡ ಒಳಿತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಂದಿ ಸೇನೆಯನ್ನು ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು ಹೊರುವ ನಾಯಕರು ಮಾತ್ರ ನಿಜವಾದ ಜನನಾಯಕರು ಎಂದು ಗುರುತಿಸುವ ದಿನಗಳು ಈಗಾಗಲೇ ಪ್ರಾರಂಭವಾಗಿವೆ. ಹಾಗಾಗಿ, ಭವಿಷ್ಯದಲ್ಲಿ ರಾಜಕೀಯ ನಾಯಕರ ಭವಿಷ್ಯ ರೈತರ ಬಸವ ತತ್ವದ ಮೇಲೆ ನಿಲ್ಲುವುದು ನಿಶ್ಚಿತವಾಗಿದೆ.
2. ನಂದಿ / ಜೋಡೆತ್ತಿನ ಕೃಷಿಕರು: ಬಸವ ತತ್ವದ ಮೂಲ ವಾರಸುದಾರರಾದ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹಾಗೂ ಆಕಳು ಸಾಕಾಣಿಕೆದಾರರು ಒಂದಾಗಿ ತಮ್ಮ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟಿತರಾಗಿ ಆಗ್ರಹಿಸಬೇಕಾಗಿದೆ. ರೈತರ ಬಸವ ತತ್ವಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಜನರಿಗೆ ಆರೋಗ್ಯ ನೀಡಲು ಬಯಸುವ ನಾಯಕರಿಗೆ ಮತ ನೀಡುವ ಸಂಕಲ್ಪ ಮಾಡಬೇಕು.
3. ನಂದೀಶ್ವರನ ಆರಾಧಕರು: ಅನೇಕ ಜನರ ಮನೆಯ ದೇವರು ನಾಲ್ಕು ಕಾಲಿನ ಬಸವಣ್ಣ ಅಥವಾ ನಂದೀಶ್ವರ ನಾಗಿದ್ದಾನೆ. ಬಹು ಜನರ ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಶಿವನ ಆರಾಧಕರು ಶಿವಲಿಂಗದ ಮುಂದಿರುವ ನಂದಿಗೆ ತಲೆ ಬಾಗುತ್ತಾರೆ. ಇವರೆಲ್ಲರೂ, ಒಂದಾಗಿ ವಾಸ್ತವದಲ್ಲಿ ನಂದಿ ಸಂಪತ್ತನ್ನು ಹೆಚ್ಚಿಸಲು ತನು ಮನ ಧನವನ್ನು ಕೂಡಿಸಿ ಪ್ರಯತ್ನಿಸಿ ನಂಬಿದ ದೇವರ ಕೃಪೆಗೆ ಪಾತ್ರರಾಗುವ ಅವಕಾಶ ಬಂದೊದಗಿದೆ. ಅದಕ್ಕಾಗಿ, ನಂದೀಶ್ವರನ ಆರಾಧಕರು ನಂದಿ ಸೇನೆಯನ್ನು ಸಂಘಟಿಸಿ ತಮ್ಮ ಗ್ರಾಮದಲ್ಲಿ ನಂದಿ ಸಂತತಿಯನ್ನು ಹೆಚ್ಚಿಸುವ ಜವಾಬ್ದಾರಿ ಹೊರಬೇಕಾಗಿದೆ. ರೈತರ ಬಸವ ತತ್ವ ಪುನಶ್ಚೇತನಗೊಳಿಸಲು ಬಯಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡುವ ಸಂಕಲ್ಪ‌ ಮಾಡುವುದು.
4. ಆಹಾರ ಸೇವಿಸುವವರು: ಆಹಾರ ಸೇವಿಸುವ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ಹೊರಬೇಕಾಗಿದೆ. ಏಕೆಂದರೆ, ಹಿಂದೆ ನಾಲ್ಕು ಕಾಲಿನ ಬಸವಣ್ಣಗಳ ಉಳುಮೆಯಿಂದ ನಿರ್ಮಾಣವಾದ ಫಲವತ್ತಾದ ಜಮೀನುಗಳಲ್ಲಿ ಬೆಳೆದ ಆಹಾರ ಸೇವಿಸುತ್ತಾ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಆದರೆ, ಇಂದು ನಾಲ್ಕು ಕಾಲಿನ ಬಸವಣ್ಣಗಳ ಬಸವ ತತ್ವದ ಬದಲು ತೈಲ ತತ್ವ ಆಧಾರಿತ ಯಂತ್ರ ಹಾಗೂ ರಾಸಾಯನಿಕ ಕೃಷಿ ಹೆಚ್ಚಾದಂತೆ ನಾವು ತಿನ್ನುವ ಆಹಾರ ವಿಷಮಯವಾಗಿ ರೋಗಗ್ರಸ್ತ ಸಮಾಜ ನಿರ್ಮಾಣವಾಗುತ್ತಿದೆ. ಇದು ಜಗತ್ತಿನಲ್ಲಿ ರೋಗ ಕ್ರಾಂತಿಯನ್ನು ಉಂಟು ಮಾಡುತ್ತಿದೆ. ಅದಕ್ಕಾಗಿ, ತಮಗೆ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಆಹಾರ ಬೇಕೆನ್ನುವವರು ನಂದಿ ಸೇನೆ ಸಂಘಟನೆ ಬೆಳೆಸುವ ಜವಾಬ್ದಾರಿ ಹೊರಬೇಕಾಗಿದೆ. ರೈತರ ಬಸವ ತತ್ವ ಪುನಶ್ಚೇತನಗೊಳಿಸಲು ಬಯಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡುವ ಸಂಕಲ್ಪ‌ ಮಾಡುವುದು.

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com


No comments:

Post a Comment

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...